ಚಟುವಟಿಕೆಗಳು
1. ಕರ್ನಾಟಕ ಲೋಚನ ವಿದ್ವತ್ ಪತ್ರಿಕೆ
ಕನ್ನಡದಲ್ಲಿರುವ ಕೆಲವೇ ಸಂಶೋಧನಾತ್ಮಕ ನಿಯತಕಾಲಿಕೆಗಳಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುವ "ಕರ್ನಾಟಕ ಲೋಚನ" ಪತ್ರಿಕೆಯನ್ನು ಪ್ರತಿಷ್ಠಾನ 1982ರಲ್ಲಿ ಆರಂಭಿಸಿತು. ಸಂಶೋಧನ ಕ್ಷೇತ್ರದ ವಿವಿಧ ಶಾಖೆಗಳಲ್ಲಿ ನುರಿತ ವಿದ್ವಾಂಸರು ಬರೆಯುವ ಸಂಶೋಧನ ಲೇಖನಗಳು, ಟಿಪ್ಪಣಿಗಳು, ಸಂಶೋಧನ ಗ್ರಂಥಗಳ ವಿಮರ್ಶೆ, ಟೀಕೆ-ಟಿಪ್ಪಣಿ ಇತ್ಯಾದಿ ಇದರಲ್ಲಿರುತ್ತವೆ. ನಿಯತವಾಗಿ ಪ್ರಕಟವಾಗುತ್ತಿರುವ ನಾಡಿನ ಏಕೈಕ ವಿದ್ವತ್ ಪತ್ರಿಕೆ ಎಂಬ ಹೆಗ್ಗಳಿಕೆ ಇದಕ್ಕಿದೆ.
ಹೊಂಗನಸು ವಾರ್ತಾಪತ್ರ
ಪ್ರತಿಷ್ಠಾನ ಪ್ರಕಟಿಸುತ್ತಿರುವ ಮಾಸಿಕ "ಹೊಂಗನಸು ವಾರ್ತಾಪತ್ರ'' ಪ್ರತಿಷ್ಠಾನದ ಎಲ್ಲಾ ಚಟುವಟಿಕೆಗಳ ವಿವರ ನೀಡುತ್ತಿದೆ. ಇದನ್ನು ಎಲ್ಲಾ ಸದಸ್ಯರಿಗೂ ಅಂಚೆ ಮೂಲಕ ತಲುಪಿಸಲಾಗುತ್ತಿದೆ.
2. ಸಹೃದಯ ಗೋಷ್ಠಿ
ಆಧುನಿಕ ಸಾಹಿತ್ಯಕ್ಕೆ ಸಂಬಂಧಪಟ್ಟ ವೇದಿಕೆ "ಸಹೃದಯ ಗೋಷ್ಠಿ"ಯಡಿಯಲ್ಲಿ ಪ್ರತಿಷ್ಠಾನ ಪ್ರಾರಂಭವಾದಂದಿನಿಂದಲೂ ಪ್ರತಿ ತಿಂಗಳೂ ಕಾರ್ಯಕ್ರಮವನ್ನು ನಡೆಸುತ್ತಿದೆ. ಸ್ವರಚಿತ ಕವಿತೆ ಕತೆ-ನಾಟಕ-ಪ್ರಬಂಧ-ಸಂಶೋಧನಾ ಲೇಖನಗಳ ವಾಚನ, ಇತರ ಗಣ್ಯರ ಕೃತಿ-ಕವನಗಳ ವಾಚನ, ವಿಮರ್ಶೆ-ಚರ್ಚೆ ಇಲ್ಲಿ ನಡೆಯುತ್ತದೆ. ಹೊಸದಾಗಿ ಸಾಹಿತ್ಯ ರಚನೆಯಲ್ಲಿ ತೊಡಗುವವರಲ್ಲಿ ಸಾಹಿತ್ಯಾಸಕ್ತಿ ಪ್ರಬಲಗೊಂಡು ಸಾಹಿತಿಗಳಾಗಿ ಬೆಳೆಯಲು ಈ ವೇದಿಕೆ ನೆರವಾಗುತ್ತದೆ.
3. "ಹಸ್ತಪ್ರತಿಶಾಸ್ತ್ರ" ಮತ್ತು "ಹಸ್ತಪ್ರತಿ ಅಧ್ಯಯನ" ತರಗತಿ
ನಶಿಸುತ್ತಿರುವ ಪ್ರಾಚೀನ ಹಸ್ತಪ್ರತಿಗಳನ್ನು ಓದುವ, ಪ್ರತಿಮಾಡುವ ಕಲೆಯನ್ನು ಇದರಲ್ಲಿ ಕಲಿಸಿಕೊಡುವುದಲ್ಲದೆ, ವೈಜ್ಞಾನಿಕವಾಗಿ ಓಲೆಗರಿ ಗ್ರಂಥಗಳನ್ನು ಸಂರಕ್ಷಿಸುವುದರಲ್ಲೂ ಶಾಸ್ತ್ರೀಯವಾಗಿ ಸಂಪಾದಿಸುವುದರಲ್ಲೂ ತರಬೇತಿಯನ್ನು 1990 ರಿಂದ ನಡೆಸುತ್ತಿದೆ. ಕರ್ನಾಟಕದಲ್ಲೇ, ಪ್ರಾಯಶಃ ಭಾರತದಲ್ಲೇ, ಏಕೈಕ ತರಬೇತಿ ಕೇಂದ್ರ ಇದಾಗಿದೆ. ಹಸ್ತಪ್ರತಿಶಾಸ್ತ್ರವನ್ನು ಹಾಗೂ "ಹಸ್ತಪ್ರತಿ ಅಧ್ಯಯನ" ಡಿಪ್ಲಮೋ ತರಗತಿಗಳನ್ನು 2006 ರಿಂದ ನಡೆಸಲಾಗುತ್ತಿದೆ. ಇದು ನೂತನ ಅಧ್ಯಯನ ವಿಷಯವಾಗಿದ್ದು ಇದರಲ್ಲಿ ಹಸ್ತಪ್ರತಿಗಳನ್ನು ಸಾಂಸ್ಕೃತಿಕವಾಗಿ ಅಭ್ಯಾಸಕ್ಕೆ ಒಳಪಡಿಸುವ ಚಿಂತನಕ್ರಮವಿರುತ್ತದೆ.
4. ಹಸ್ತಪ್ರತಿ ಸಮಾವೇಶ
ಪ್ರತಿ ವರ್ಷವೂ ಪ್ರತಿಷ್ಠಾನವು ರಾಜ್ಯದ ವಿವಿಡೆಗಳಲ್ಲಿ ಹಸ್ತಪ್ರತಿ ಸಮಾವೇಶವನ್ನು ಆಯೋಜಿಸುತ್ತಿದೆ. ಇದುವರೆಗೆ ಉಜಿರೆ, ಶಿವಮೊಗ್ಗ ಜಿಲ್ಲೆಯ ಶ್ರೀರಾಮಚಂದ್ರಾರ, ತುಮಕೂರಿನಲ್ಲಿ ಸಮ್ಮೇಳನಗನ್ನು ನಡೆಸಲಾಗಿದೆ. ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಬೆಂಗಳೂರಿನ ಹೊರವಲಯದಲ್ಲಿ ನಡೆಸುವ ಎಲ್ಲಾ ಕಾರ್ಯಕ್ರಮಗಳಲ್ಲೂ ಹಸ್ತಪ್ರತಿ ಪ್ರದರ್ಶನ ನಡೆಸುತ್ತಿದೆ. ಈ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
5. "ಸಿರಿಕಂಟ" - ವಿದ್ಯಾಗೋಷ್ಠಿ
-
ಪ್ರತಿಷ್ಠಾನ ನಡೆಸುತ್ತಿರುವ ಹಸ್ತಪ್ರತಿಶಾಸ್ತ್ರ ತರಗತಿಯ ಹತ್ತು ವರ್ಷಗಳ ನೆನಪಿಗಾಗಿ ಹಸ್ತಪ್ರತಿ ವಿದ್ಯಾಗಳ ವೇದಿಕೆ "ಸಿರಿಕಂಟ"ವನ್ನು 2000 ದಿಂದ ಆರಂಭಿಸಿದೆ. ಇದು ಮುಖ್ಯವಾಗಿ ಈ ಕೆಳಕಂಡ ಕೆಲವು ಚಟುವಟಿಕೆಗಳನ್ನು ನಡೆಸುತ್ತಿದೆ. ಇದರಲ್ಲಿ ಪ್ರಾಚೀನ ಹಸ್ತಪ್ರತಿಗಳ ಅಧ್ಯಯನದಲ್ಲಿ ನುರಿತ ಆಸಕ್ತರು ಹಾಗೂ ತಜ್ಞರಿದ್ದಾರೆ.
- ಅ. ಹಳಗನ್ನಡ ಕಾವ್ಯಾಭ್ಯಾಸ ಶಿಬಿರ : ಹಳಗನ್ನಡ ಕಾವ್ಯಗಳ ಓದು, ಅರ್ಥಗ್ರಹಿಕೆ, ಬೋಧನೆ, ಅಧ್ಯಯನಗಳ ಅನುಕೂಲಕ್ಕಾಗಿ ನರ್ಮನನ ಮತ್ತು ಅಭ್ಯಾಸ ತರಗತಿಗಳಂತೆ ನಡೆಯುವ ಒಂದು ತಿಂಗಳ ಶಿಬಿರಗಳನ್ನು ನಡೆಸಲಾಗುತ್ತಿದೆ.
- ಆ. ಹಸ್ತಪ್ರತಿ ಸೇವಾ ಕೇಂದ್ರ : ಅಪೇಕ್ಷಿಸಿದವರಿಗೆ ತಮ್ಮಲ್ಲಿರುವ ಪ್ರಾಚೀನ ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಕೊಡುವುದಲ್ಲದೆ ಸೂಚಿ, ಸಂಪ್ರತಿ, ಸಂಪಾದನೆ ಇತ್ಯಾದಿ ಸೇವೆಯನ್ನು ನುರಿತ ತಜ್ಞರಿಂದ ಒದಗಿಸಲಾಗುತ್ತದೆ.
- ಇ. ಹಸ್ತಪ್ರತಿ ಕಾರ್ಯಾಗಾರ : ಹಸ್ತಪ್ರತಿ ಸಂರಕ್ಷಣೆ ಮತ್ತು ತಿಳುವಳಿಕೆ ಕುರಿತ ಅಲ್ಪಾವಧಿಯ ಕಾರ್ಯಾಗಾರಗಳನ್ನು ಆಹ್ವಾನಿತ ಸಂಸ್ಥೆಗಳ ನೆರವಿನೊಂದಿಗೆ ನಡೆಸುತ್ತದೆ.
- ಈ. ಮನೆಬಾಗಿಲಿಗೆ ಹಸ್ತಪ್ರತಿ ದರ್ಶನ : ಈ ಯೋಜನೆಯಲ್ಲಿ ನಾಡಿನಾದ್ಯಂತ ಆಹ್ವಾನ ನೀಡುವ ಶಾಲೆ-ಕಾಲೇಜು, ಸಂ ಸಂಸ್ಥೆಗಳಲ್ಲಿ ಪ್ರಾಚೀನ ಹಸ್ತಪ್ರತಿ ಪ್ರದರ್ಶನವನ್ನು ನಡೆಸಿ ಜಾಗೃತಿ ಉಂಟುಮಾಡಲಾಗುತ್ತಿದೆ.
6. ದತ್ತಿ ಉಪನ್ಯಾಸಗಳು
ನಾಡಿನ ಹಲವಾರು ಗಣ್ಯಾತಿಗಣ್ಯರ ಹೆಸರುಗಳಲ್ಲಿ ಸ್ಥಾಪಿಸಲಾಗಿರುವ ಸುಮಾರು 40 ದತ್ತಿನಿಧಿಗಳಿಂದ ಪ್ರತಿ ವರ್ಷ ಸಾಹಿತ್ಯ-ಸಂಸ್ಕೃತಿ-ಸಂಶೋಧನೆ ಕುರಿತು ಮೌಲಿಕ ಉಪನ್ಯಾಸಗಳನ್ನು, ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತಿದೆ.
7. ಸಾಹಿತ್ಯ ಪ್ರಶಸ್ತಿಗಳು
-
ಪ್ರತಿಷ್ಠಾನದಲ್ಲಿರುವ ಕೆಲವು ದತ್ತಿ ನಿಧಿಗಳ ಮೂಲಕ ಈ ಕೆಳಕಂಡ ಸಾಹಿತ್ಯ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
- ಅ. ಸಾವಿತ್ರಮ್ಮ ದತ್ತಿ ಮಹಿಳಾ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ: ಒಂದು ವರ್ಷ ಮಹಿಳಾ ಸೃಜನೇತರ ಸಾಹಿತ್ಯಕ್ಕೆ, ಇನ್ನೊಂದು ವರ್ಷ ಮಕ್ಕಳ ಸಾಹಿತ್ಯಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯ ಮೊತ್ತ ರೂ. 1,000-00 ಈ ಎರಡೂ ಸಾಹಿತ್ಯ ಪ್ರಕಾರಗಳ ಪುರಸ್ಕಾರಕ್ಕಾಗಿ ಎಂ.ವಿ.ಸೀ. ಅವರು ಇದನ್ನು 1988ರಲ್ಲಿ ಸ್ಥಾಪಿಸಿದ್ದಾರೆ.
- ಆ. ರಾಸ ಸಾಹಿತ್ಯ ವಿಮರ್ಶಾಲೇಖನ ಪ್ರಶಸ್ತಿ : ಸಮೇತನಹಳ್ಳಿ ರಾಮರಾವ್ ಅವರ ಕೃತಿಗಳ ವಿಮರ್ಶೆಯ ಒಂದು ಉತ್ತಮ ಲೇಖನಕ್ಕೆ ಕೊಡುವ 500-00 ರೂ.ಗಳ ಈ ಪ್ರಶಸ್ತಿಯನ್ನು ಸ್ವತಃ ಲೇಖಕರು 1995ರಲ್ಲಿ ಸ್ಥಾಪಿಸಿದ್ದಾರೆ.
- ಇ. ಅನಂತರಂಗ ಸಂಶೋಧನಾ ಸಾಹಿತ್ಯ ಪ್ರಶಸ್ತಿ : ಶ್ರೀ ಕಟ್ಟೆ ನಾಗರಾಜ್ ಅವರು ತಮ್ಮ ಅನಂತರಂಗ ಪ್ರತಿಷ್ಠಾನದ ಹೆಸರಿನಲ್ಲಿ 1998ರಲ್ಲಿ ಸ್ಥಾಪಿಸಿದ್ದಾರೆ. ಪ್ರತಿವರ್ಷ ಉತ್ತಮ ಸಂಶೋಧನ ಸಾಹಿತ್ಯ ಕೃತಿಗೆ ರೂ. 1,000-00ದ ಮೊತ್ತ ಪ್ರಶಸ್ತಿ ನೀಡಲಾಗುವುದು.
- ಈ. ಎಂ.ವಿ.ಸೀ. ಪುರಸ್ಕಾರ : ಎಂ.ವಿ. ಸೀತಾರಾಮಯ್ಯನವರ ಹೆಸರಿನಲ್ಲಿ ಅವರ ಮಕ್ಕಳು 2002ರಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. ಸೀತಾರಾಮಯ್ಯನವರ ಮುಖ್ಯ ಕಾರ್ಯಕ್ಷೇತ್ರಗಳಾದ ಸೃಜನ ಸಾಹಿತ್ಯ, ಸಂಶೋಧನ ಸಾಹಿತ್ಯ ಮತ್ತು ಸಾಹಿತ್ಯ ಸಂಟನೆ - ಈ ಮೂರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ, ಮತ್ತು ಯಾವುದೇ ಗಣ್ಯ ಪ್ರಶಸ್ತಿಯನ್ನು ಆವರೆಗೆ ಪಡೆಯದಿರುವ, ಅತ್ಯಂತ ಹಿರಿಯ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು, ಹಾಗೂ ನಗದು ಹಣ ರೂ. 10,000 ರೂ.ಗಳನ್ನು ಪ್ರತಿವರ್ಷ ಅನುಕ್ರಮವಾಗಿ ಒಂದು ವಿಭಾಗಕ್ಕೆ ನೀಡಲಾಗುವುದು.
- ಉ. ದಿ|| ಪುಟ್ಟಚ್ಚಮ್ಮ-ವೆಂಕಟರಾಮಯ್ಯ ಕಥೆ-ಕಾದಂಬರಿ ಪ್ರಶಸ್ತಿ : ಶ್ರೀ ಎಸ್.ವಿ. ಶ್ರೀನಿವಾಸರಾವ್ ಅವರು ತಮ್ಮ ದತ್ತು ತಂದೆ-ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಒಂದು ವರ್ಷ ಉದಯೋನ್ಮುಖ ಲೇಖಕಿಯ ಕಥಾ ಸಂಕಲನಕ್ಕೆ, ಒಂದು ವರ್ಷ ಉತ್ತಮ ಕಾದಂಬರಿಗೆ, ನೀಡಲಾಗುತ್ತಿದೆ. ಪ್ರಶಸ್ತಿ ಮೊತ್ತ ನಗದು ರೂ. 2000/-.
8. ಸಾಂಸ್ಕೃತಿಕ ಚಟುವಟಿಕೆಗಳು
-
ಪ್ರತಿಷ್ಠಾನದಲ್ಲಿ ಆಧುನಿಕ ಸಾಹಿತ್ಯವನ್ನು ಪರಿಚಯಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕೆಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
- ಅ. ಬಿ.ಎಂ.ಶ್ರೀ. ಮತ್ತು ಪಿ. ಕಾಳಿಂಗರಾವ್ ಸ್ಮಾರಕ ಅಖಿಲ ಕರ್ನಾಟಕ ಸುಗಮ ಸಂಗೀತ ಸ್ಪರ್ಧೆ : ಪಿ. ಕಾಳಿಂಗರಾವ್ ಬಳಗದ ಸಹಕಾರದೊಂದಿಗೆ 2000 ದಿಂದ, ಭಾವಗೀತೆ ಮತ್ತು ಜನಪದ ಗೀತೆಗಳಲ್ಲಿ ಹಿರಿಯರ ಹಾಗೂ ಕಿರಿಯರ ವಿಭಾಗದಲ್ಲಿ ಈ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು ಪ್ರತಿವರ್ಷ ಒಟ್ಟು 16 ಬಹುಮಾನಗಳನ್ನು ನೀಡಲಾಗುತ್ತಿದೆ. ಪ್ರತಿವರ್ಷ ಡಿಸೆಂಬರ್ / ಜನವರಿಯಲ್ಲಿ ಈ ಸ್ಪರ್ಧೆ ನಡೆಯುತ್ತದೆ.
- ಆ. ಡಾ. ಗೋವಿಂದ ಜಾಲೀಹಾಳ ಭಕ್ತಿ ಗೀತೆಗಳ ಸ್ಪರ್ಧೆ: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ. ಗೋವಿಂದ ಜಾಲೀಹಾಳ ಹಾಗೂ ಅವರ ಮಕ್ಕಳು ಸ್ಥಾಪಿಸಿರುವ ಈ ದತ್ತಿ ಸಂಗೀತ ಕಾರ್ಯಕ್ರಮ ಪ್ರತಿವರ್ಷ ನಡೆಯುತ್ತಿದೆ.
- ಇ. ಕನ್ನಡ ಸಾಹಿತ್ಯೋಪಾಸಕರು-ವಿಶೇಷ ಕಾರ್ಯಕ್ರಮ : ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಹಿರಿಯ ಸಾಹಿತಿ ಗಣ್ಯರನ್ನು ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಪ್ರತಿ ತಿಂಗಳೂ ನಡೆಸಲಾಗುತ್ತಿದೆ.
- ಈ. ಸಿರಿಸಂಗೀತ : ರಜತೋತ್ಸವದ ನೆನಪಿಗಾಗಿ 2004 ರಿಂದ ಆರಂಭಮಾಡಿರುವ ಈ 'ಸಿರಿಸಂಗೀತ' ಪ್ರತಿ ತಿಂಗಳ ಸಂಗೀತ ಕಾರ್ಯಕ್ರಮ ವೇದಿಕೆ. ಜನಪ್ರಿಯವಾಗಿರುವ ಸುಗಮ ಸಂಗೀತ ಕ್ಷೇತ್ರಕ್ಕೆ ಸಾಹಿತ್ಯದ ವ್ಯಾಪಕತೆಯನ್ನು ಒದಗಿಸುವ ಉದ್ದೇಶದಿಂದ ಭಾವಗೀತೆ, ಜನಪದಗೀತೆ, ವಚನ, ಕೀರ್ತನೆ, ತತ್ವಪದ ಮತ್ತು ಗಮಕ ಸಂಗೀತ ಕಾರ್ಯಕ್ರಮಗಳನ್ನು ಅನುಕ್ರಮವಾಗಿ ತಿಂಗಳಿಗೊಂದರಂತೆ ನಡೆಸಲಾಗುವುದು. ಈ ಕಾರ್ಯಕ್ರಮ ಮಾಲೆಯಲ್ಲಿ ಹೊಸ ಹೊಸ ಸಾಹಿತ್ಯವನ್ನು ಸಂಗೀತಕ್ಕೆ ಅಳವಡಿಸುವ ಕಲಾ ತಂಡಗಳಿಗೆ, ವಿಶೇಷವಾಗಿ ಉದಯೋನ್ಮುಖ ಕಲಾವಿದರಿಗೆ ಆದ್ಯತೆ ನೀಡಲಾಗುವುದು.
9. ಬಿ.ಎಂ.ಶ್ರೀ. ನೆನಪಿನ ಕಾರ್ಯಕ್ರಮ
ಜನವರಿ 3 ಬಿ.ಎಂ.ಶ್ರೀ. ಅವರ ಹುಟ್ಟಿದ ಹಬ್ಬ. ಅಂದು ಬಿ.ಎಂ.ಶ್ರೀ ಅವರ ಮೊಮ್ಮಗಳು ಶ್ರೀಮತಿ ಕಮಲಿನಿ ಬಾಲುರಾವ್ ಅವರು ನೀಡಿರುವ 15 ಲಕ್ಷ ದತ್ತಿ ವತಿಯಿಂದ ಕನ್ನಡ ಭಾಷೆಯ ಶ್ರೇಷ್ಠ ಸಾಹಿತಿಯೊಬ್ಬ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಆಯ್ಕೆ ಸಮಿತಿಯು ಸೂಚಿಸಿದವರಿಗೆ ರೂ. ಒಂದು ಲಕ್ಷ ನಗದು ಮತ್ತು ಸ್ಮರಣಿಯನ್ನೊಳಗೊಂಡ "ಶ್ರೀ" ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗುವುದು.